Belagavi News:
ಶಿರಡಿ, ಮಹಾರಾಷ್ಟ್ರ: ಸಾಯಿಬಾಬಾ ದರ್ಶನಕ್ಕಾಗಿ ಮಹಾರಾಷ್ಟ್ರದ ಶಿರಡಿಗೆ ತೆರಳಿದ್ದ ಕರ್ನಾಟಕದ ಭಕ್ತರ ಕುಟುಂಬವೊಂದು ಹೃದಯಾವಿದ್ರಾವಕ ದುರಂತಕ್ಕೆ ಸುಲುಗಿದೆ. ದೇವಸ್ಥಾನದ ಪಾರ್ಕಿಂಗ್ ಪ್ರದೇಶದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿಯ ಮೇಲೆ ಪ್ರಯಾಣಿಕರ ಬಸ್ ಹಿಮ್ಮುಖವಾಗಿ ಬಂದ ಪರಿಣಾಮ ಆಕೆ ಸ್ಥಳದಲ್ಲಿ ಗಂಭೀರವಾಗಿ ಗಾಯಗೊಂಡು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ಗದಗ ಜಿಲ್ಲೆಯ ಕೋಟ್ಮುಚಿ ಗ್ರಾಮದ ಕೃತಿಕಾ ಮಾರುತಿ ದಾದ್ಮಣಿ (3) ಎಂದು ಗುರುತಿಸಲಾಗಿದೆ. ಕುಟುಂಬವು ಸಾಯಿಬಾಬಾ ದರ್ಶನಕ್ಕಾಗಿ ಶಿರಡಿಗೆ ಆಗಮಿಸಿ, ಇಂದು ಬೆಳಗ್ಗೆ ಸುಮಾರು 11ಗಂಟೆಗೆ ತಮ್ಮ ವಾಹನವನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿತ್ತು.
ದರ್ಶನ ಮುಗಿಸಿ ಸಂಜೆ ಪಾರ್ಕಿಂಗ್ ಪ್ರದೇಶದಲ್ಲಿ ಕುಟುಂಬ ಸದಸ್ಯರು ಕಾಯುತ್ತಿದ್ದ ವೇಳೆ, ಕೃತಿಕಾ ಮಕ್ಕಳಿಗಾಗಿ ಮೀಸಲಾದ ಸ್ವಿಂಗ್ ಸೆಟ್ ನಲ್ಲಿ ಆಟವಾಡುತ್ತಿದ್ದಳು. ಇದೇ ವೇಳೆ ಟ್ರಾವೆಲ್ಸ್ ಬಸ್ ಹಿಮ್ಮುಖವಾಗಿ ಚಲಿಸುವಾಗ ಚಾಲಕನ ಗಮನಕ್ಕೆ ಮಗು ಬಾರದ ಕಾರಣ ಬಸ್ ಮಗುವಿನ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಗಂಭೀರವಾಗಿ ಗಾಯಗೊಂಡ ಕೃತಿಕಾಳನ್ನು ತಕ್ಷಣವೇ ಸಾಯಿ ಸಂಸ್ಥಾನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು.
ಘಟನೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು. ಪಾರ್ಕಿಂಗ್ ಪ್ರದೇಶದಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆಗಳು ಉದ್ಬವಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣವನ್ನು ಪರಿಶೀಲಿಸುತ್ತಿದ್ದು, ಬಸ್ ಚಾಲಕನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಘಟನೆಯ ಸಂಬಂಧ ಶಿರಡಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದು, ಅಪಘಾತಕ್ಕೆ ಕಾರಣವಾದ ಟ್ರಾವೆಲ್ಸ್ ಬಸ್ ಚಾಲಕನನ್ನು ಬಂದಿಸಿದ್ದಾರೆ ಅಲ್ಲದೆ, ಅಪಘಾತಕ್ಕೀಡಾದ ಬಸ್ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿರಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಂಜಿತ್ ಗಲಾಂಡೆ, "ಘಟಣೆಯಲ್ಲಿ ಭಾಗಿಯಾದ ಬಸ್ ಚಾಲಕನನ್ನು ಬಂಧಿಸಲಾಗಿದೆ. ಅಪಘಾತಕ್ಕೀಡಾದ ಬಸ್ ಅನ್ನೋ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಅಪಘಾತಕ್ಕೆ ನಿಖರ ಕಾರಣವೇನು, ಚಾಲಕನ ನಿರ್ಲಕ್ಷ್ಯ ಇದೇಯೇ, ಪಾರ್ಕಿಂಗ್ ಪ್ರದೇಶದಲ್ಲಿನ ಸುರಕ್ಷತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿದೆಯೇ ಎಂಬ ಎಲ್ಲ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ವರದಿ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.