ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ಕ್ಯಾಮರಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಕರ್ನಾಟಕದಲ್ಲಿ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಕಡೆಗಳಲ್ಲಿ ಕಿಡಿಗೇಡಿಗಳು ಎಐ ವಿಡಿಯೋಗಳನ್ನು ಹರಿಯಬಿಡುತ್ತಿರುವುದರಿಂದ ಜನ ಸಂಕಷ್ಟಕ್ಕೀಡಾಗುತ್ತಿರುವ ಬಗ್ಗೆಯೂ ವರದಿಯಾಗಿದೆ. ಇದೀಗ ಮಾನವ-ವನ್ಯಪ್ರಾಣಿ ಸಂಘರ್ಷ ತಡೆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಕ್ರಮಕ್ಕೆ ಸೂಚಿಸಿದ್ದಾರೆ.
ಬೆಂಗಳೂರು:
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷವನ್ನು (Human Wildlife Conflict) ಪರಿಣಾಮಕಾರಿಯಾಗಿ ನಿಭಾಯಿಸಲು ಸರ್ಕಾರ ಸಮಗ್ರ ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅರಣ್ಯ ಇಲಾಖೆಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ದ್ರೋಣ್ ಕ್ಯಾಮರಾ ನಿಗಾ, 8 ಅಂಶಗಳ ಕಾರ್ಯಕ್ರಮಕ್ಕೆ ಅವರು ಸಲಹೆ ನೀಡಿದ್ದಾರೆ. ಕೃಪಾಕರ ಸೇನಾನಿ, ಸಂಜಯ್ ಗುಬ್ಬಿ ಸೇರಿದಂತೆ ವನ್ಯಜೀವಿ ತಜ್ಞರೊಂದಿಗೆ ಚರ್ಚೆ ನಡೆಸಿ ವೈಜ್ಞಾನಿಕ ಕ್ರಮಗಳನ್ನು ರೂಪಿಸುವಂತೆ ತಿಳಿಸಿದ್ದಾರೆ. ಸಂಘರ್ಷ ತಪ್ಪಿಸಲು ಅಗತ್ಯ ಸಿಬ್ಬಂದಿ, ಅನುದಾನ ಸೇರಿ ಸರ್ಕಾರದಿಂದ ಎಲ್ಲಾ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.
ರಾಜ್ಯ ಮಟ್ಟದ ಸಮಗ್ರ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸುವುದು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಈ ಸೂಚನೆಗಳನ್ನು ನೀಡಿದ್ದಾರೆ.
ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸಿಎಂ ಸೂಚಿಸಿದ 8 ಅಂಶಗಳ ಯೋಜನೆ:
ಸಂಘರ್ಷ ಪ್ರದೇಶಗಳ ಗುರುತು ಮಾಡಿಕೊಳ್ಳುವುದು: ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಸಂಘರ್ಷದ ಸ್ವರೂಪವನ್ನು ಪಟ್ಟಿ ಮಾಡುವುದು.
ಮಾನವ ಸಂಪನ್ಮೂಲ ನಿರ್ವಹಣೆ: ಸಂಘರ್ಷದ ತೀವ್ರತೆಯ ಆಧಾರದ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸುವುದು.
ಗಸ್ತು ಬಲಪಡಿಸುವುದು: ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಿಸಿ, ರಿಜಿಸ್ಟರ್ಗಳನ್ನು ನಿರ್ವಹಿಸುವುದು.
ಹಿರಿಯ ಅಧಿಕಾರಿಗಳ ವಾಸ್ತವ್ಯ: ಸಂಘರ್ಷಪೀಡಿತ ಗ್ರಾಮಗಳಲ್ಲಿ ಹಿರಿಯ ಅಧಿಕಾರಿಗಳು ನಿಯಮಿತವಾಗಿ ವಾಸ್ತವ್ಯ ಮಾಡಿ ಪರಿಸ್ಥಿತಿ ಪರಿಶೀಲಿಸುವುದು.
ಸ್ಥಳೀಯರ ತೊಡಗಿಸಿಕೊಳ್ಳುವುದು: ಅರಣ್ಯ ಅಂಚಿನ ಗ್ರಾಮಗಳ ಯುವಕರು ಮತ್ತು ಹಿರಿಯರನ್ನು ‘ಅರಣ್ಯ ಮಿತ್ರ’ರಾಗಿ ಗುರುತಿಸಿ, ಗಸ್ತು ಹಾಗೂ ಕಾರ್ಯಾಚರಣೆಯಲ್ಲಿ ಅವರ ಸೇವೆ ಪಡೆಯುವುದು.
ವನ್ಯಜೀವಿ ಕಾರ್ಯಾಚರಣೆ ಬಲಪಡಿಸುವುದು:
ವನ್ಯಜೀವಿಗಳು ಸಂಚರಿಸುವ ತಂತ್ರಜ್ಞಾನ ಆಧಾರಿತ ಸ್ಥಳಗಳಲ್ಲಿ 24/7 ವಾಹನ ಮತ್ತು ಅರಣ್ಯ ಸಿಬ್ಬಂದಿಯನ್ನು ಲಭ್ಯವಾಗುವಂತೆ ಮಾಡುವುದು.
ಅಣಕು ಪ್ರದರ್ಶನ : ವನ್ಯಜೀವಿ ದಾಳಿ ಅಥವಾ ಸೆರೆ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಕುರಿತು ಸ್ಥಳೀಯರಿಗೆ ಮಾದರಿ ಪ್ರದರ್ಶನ ಆಯೋಜಿಸುವುದು.
ಸಮನ್ವಯ ಸಮಿತಿಗಳ ರಚನೆ: ಜಿಲ್ಲಾ ಮಟ್ಟದಲ್ಲಿ ಸಮನ್ವಯ/ಸಹಯೋಗ ಸಮಿತಿ ರಚಿಸುವುದು. ತಾಲ್ಲೂಕು ಮಟ್ಟದಲ್ಲಿ ಉಪಸಮಿತಿ ರಚಿಸಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಸಹಾಯ ಪಡೆಯುವುದು. ಈ ಸಮಿತಿಗಳು ನಿಯಮಿತವಾಗಿ ಸಭೆ ನಡೆಸಿ ಸಂಘರ್ಷ ನಿಯಂತ್ರಣಕ್ಕೆ ಶ್ರಮಿಸಲಿವೆ.
ಹುಲಿಗಳ ಚಲನವಲನ ನಿಗಾ ದಳಕ್ಕೆ ದ್ರೋಣ್ ಕ್ಯಾಮರಾ:
ವಯಸ್ಸಾದ ಹುಲಿಗಳು ಯುವ ಹುಲಿಗಳ ದಾಳಿಯಿಂದ ಗಾಯಗೊಂಡಿರುವುದು ಅಥವಾ ಇತರ ಕಾರಣಗಳಿಂದ ಅರಣ್ಯ ಪ್ರದೇಶದ ಹೊರಗೆ ಸಂಚರಿಸುತ್ತಿರುವ 15–20 ಹುಲಿಗಳನ್ನು ತಕ್ಷಣ ಪತ್ತೆಹಚ್ಚಿ ಸೆರೆಹಿಡಿಯಲು
ದ್ರೋಣ್ ಕ್ಯಾಮರಾ ಬಳಸುವಂತೆ ಸಿಎಂ ಸೂಚಿಸಿದ್ದಾರೆ. ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಹಾಗೂ ಸ್ಕ್ವಾಡ್ಗಳ ಸಂಖ್ಯೆಯನ್ನು ಹೆಚ್ಚಿಸಲು ತಿಳಿಸಿದ್ದಾರೆ. ಸಂಘರ್ಷ ಪ್ರದೇಶಗಳಲ್ಲಿ ಪರಿಣಾಮಕಾರಿ ಕಾರ್ಯಾಚರಣೆಗೆ ಸಿಬ್ಬಂದಿ, ಅನುದಾನ ಸೇರಿದಂತೆ ಎಲ್ಲಾ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಇನ್ನಷ್ಟು ಓದಿರಿ:
ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭರದ ಸಿದ್ಧತೆ ಯಾವಾಗ ಶುರು