ಕಂಬಳಿ ಕೊಡಲು ಜಡ್ಜ್ ಎದುರು ದರ್ಶನ್ ಅಳಲು
Darshan Case: ನಟ ದರ್ಶನ್ ಜೈಲಿನಲ್ಲಿ ಚಳಿಯಿಂದಾಗಿ ಕಷ್ಟಪಡುತ್ತಿದ್ದು, ಕಂಬಳಿ ನೀಡುವಂತೆ ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. "ನಿದ್ರಿಸಲು ಸಹ ಆಗುತ್ತಿಲ್ಲ" ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಡ್ಜ್, ಜೈಲು ಅಧಿಕಾರಿಗಳಿಗೆ ಕಂಬಳಿ ನೀಡಲು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಗಿದೆ.
ನಟ ದರ್ಶನ್ (Darshan) ಅವರು ಐಷಾರಾಮಿ ಜೀವನ ನಡೆಸಿ ಬಂದವರು. ಮನೆಯಲ್ಲಿ ಎಸಿ ಹಾಕಿಕೊಂಡು, ಬೇಕಾದ ಟೆಂಪ್ರೇಚರ್ ಇಟ್ಟುಕೊಂಡು, ದಪ್ಪನೆಯ ಬೆಡ್ಶೀಟ್ ಹೊದ್ದು ಮಲಗುತ್ತಿದ್ದರು. ಆದರೆ, ಈಗ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಅವರಿಗೆ ಕಳೆದ ಬಾರಿಯಂತೆ ಈ ಬಾರಿ ಯಾವುದೇ ಸವಲತ್ತು ನೀಡುತ್ತಿಲ್ಲ. ಇದರಿಂದ ದರ್ಶನ್ ಜೈಲುವಾಸ ಕಷ್ಟಕರವಾಗಿದೆ. ಈ ಬಗ್ಗೆ ದರ್ಶನ್ ಅವರು ಕೋರ್ಟ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಆರೋಪಿ ನಾಗರಾಜ್ ಕೋರ್ಟ್್ಗೆ ಮನವಿ ಒಂದನ್ನು ಮಾಡಿದರು. ‘ಮನೆಯಿಂದ ತಂದುಕೊಟ್ಟ ಕಂಬಳಿ ನೀಡುತ್ತಿಲ್ಲ. ಜಾಸ್ತಿ ಚಳಿ ಇದ್ದರೂ ಹೆಚ್ಚುವರಿ ಕಂಬಳಿ ನೀಡುತ್ತಿಲ್ಲ’ ಎಂದು ಕೋರ್ಟ್ ಎದುರು ಹೇಳಿದ್ದಾರೆ. ಅತ್ತ ‘ವಿ ಕಾಂಟ್ ಈವನ್ ಸ್ಲೀಪ್’ ಎಂದು ದರ್ಶನ್ ಇಂಗ್ಲಿಷ್ನಲ್ಲಿ ಮಾತು ಆರಂಭಿಸಿದರು.
ಇಂದು (ನವೆಂಬರ್ 19) ದರ್ಶನ್ ಪ್ರಕರಣದ ವಿಚಾರಣೆ ಇತ್ತು. ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಿ ಹಾಕಿದ್ದಾರೆ. ಈ ವೇಳೆ ನೀಲಿ ಬಣ್ಣದ ಟಿ ಶರ್ಟ್, ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ಮೊದಲು ಆರೋಪಿಗಳ ಹಾಜರಾತಿ ಪಡೆಯಲಾಯಿತು. ಸಿಆರ್ಪಿಸಿ 294 ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಆರೋಪಿಗಳ ಪರ ವಕೀಲರಿಂದ ಕಾಲಾವಕಾಶ ಕೋರಿಕೆ ಸಲ್ಲಿಕೆ ಆಗಿದೆ.
ಸದ್ಯ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ವಿಚಾರಣೆ ಡಿ.3ಕ್ಕೆ ಮುಂದೂಡಿದೆ. ಅಲ್ಲದೆ, ಆರೋಪಿ 14 ಪ್ರದೋಷ್ ಮಧ್ಯಂತರ ಜಾಮೀನನ್ನು ನ.22ರವರೆಗೆ ವಿಸ್ತರಣೆ ಮಾಡಲಾಗಿದೆ. ದರ್ಶನ್ ತಮ್ಮ ಮೇಲೆ ಬಂದ ಆರೋಪ ಎಲ್ಲವನ್ನೂ ತಿರಸ್ಕರಿಸಿದ್ದಾರೆ. ಇದರಿಂದ ಅವರು ವಿಚಾರಣೆ ಎದುರಿಸಬೇಕಿದೆ.
‘ತುಂಬಾನೇ ಚಳಿ ಇದೆ. ನಾವ್ಯಾರೂ ರಾತ್ರಿ ಮಲಗುತ್ತಿಲ್ಲ. ಹೆಚ್ಚುವರಿ ಕಂಬಳಿ ಕೊಡಿಸಿ’ ಎಂದು ಕೋರ್ಟ್ಗೆ ದರ್ಶನ್ ಮನವಿ ಮಾಡಿದರು. ಈ ಮನವಿ ಬಳಿಕ ಜಡ್ಜ್, ‘ಪದೇ ಪದೇ ಆದೇಶ ಮಾಡಿದರೂ ಹೀಗ್ಯಾಕೆ ಮಾಡುತ್ತಾರೆ? ಚಳಿ ಇದ್ದಾಗ ಕಂಬಳಿ ಕೊಡಬೇಕಲ್ಲವೇ’ ಎಂದು ಪ್ರಶ್ನೆ ಮಾಡಿದರು. ದರ್ಶನ್ಗೆ ಕಂಬಳಿಕೊಡಲು ಜೈಲು ಅಧಿಕಾರಿಗಳಿಗೆ ಜಡ್ಜ್ ಸೂಚನೆ ನೀಡಿದರು.
ಇನ್ನಷ್ಟು ಓದಿರಿ:
ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ