ಡಿ.2 ಮತ್ತು 3ರಂದು ನಡೆದ ಹನುಮಮಾಲೆ ಅಭಿಯಾನದ ಭಾಗವಾಗಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಾಲಾಧಾರಿ ಭಕ್ತರು ವ್ರತ ವಿರಮಣ ಮಾಡಿ ತಾವು ತೊಟ್ಟಿದ್ದ ಕಷಾಯ ಬಟ್ಟೆಗಳನ್ನು ಎಸೆದು ಹೋಗಿದ್ದರು.
ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು, ಹನುಮಮಾಲೆ ಸಂದರ್ಭದಲ್ಲಿ ಭಕ್ತರು ವ್ರತ ಮುಗಿದ ಬಳಿಕ ಎಲ್ಲೆಂದರಲ್ಲಿ ಬಿಸಾಡಿದ್ದ ಕಷಾಯ ಬಟ್ಟೆಗಳನ್ನು ಸಂಗ್ರಹಿಸಿ ಹೊಸ ರೂಪ ನೀಡಿ ಮತ್ತೆ ದಿನಬಳಕೆಯ ವಸ್ತುವನ್ನಾಗಿ ಪರಿವರ್ತಿಸುತ್ತಿದ್ದಾರೆ.
ತುಂಗಭದ್ರಾ ನದಿ ದಂಡೆಯುದ್ದಕ್ಕೂ ಸಣಾಪುರ ಮತ್ತು ಆನೆಗೊಂದಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಸಾಡಿದ್ದ ಕಷಾಯ ಬಟ್ಟೆಗಳನ್ನು ಕಲೆಹಾಕಿದ ಸಂಜೀವಿನಿ ಒಕ್ಕೂಟದ ಮಹಿಳೆಯರು, ಅವುಗಳನ್ನು ಶುಭ್ರ, ಸ್ವಚ್ಛಗೊಳಿಸಿ, ಇಸ್ತ್ರಿ (ಐರನ್) ಮಾಡಿ ಕೈ ಚೀಲಗಳನ್ನಾಗಿ ಪರಿವರ್ತಿಸಿದ್ದಾರೆ.
ಸಾಹಾಸ್ ಎಂಬ ಸಂಸ್ಥೆಯ ನೇತೃತ್ವದಲ್ಲಿ ತರಬೇತಿ ಪಡೆದ ಮಹಿಳೆಯರು ಕಸದಿಂದ ರಸ ತೆಗೆಯುವ ಕೆಲಸ ಮಾಡಿದ್ದಾರೆ.
ಸಂಸ್ಥೆಯ ಮೇಲ್ವಿಚಾರಕ ಸಂಪತ್, ಪ್ರಮುಖರಾದ ಹೊನ್ನಪ್ಪ ನಾಯಕ್, ಡಾ.ವೆಂಕಟೇಶ ಬಾಬು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂಜನಾದ್ರಿ ಬೆಟ್ಟದ ಬಳಿ ಆಯೋಜಿಸಿದ್ದ ಸಾಂಕೇತಿಕ ಚೀಲ ಮೇಳದಲ್ಲಿ ಭಾಗಿಯಾಗಿದ್ದ ತಹಶೀಲ್ದಾರ್ ಯು.ನಾಗರಾಜ್ ಸಮ್ಮುಖದಲ್ಲಿ, ಕೈಚೀಲಗಳನ್ನು ಜನರಿಗೆ ವಿತರಿಸಿ ತ್ಯಾಜ್ಯ ಮರುಬಳಕೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಪ್ಲಾಸ್ಟಿಕ್ ಚೀಲಗಳ ಬಳಕೆಯ ಬದಲು ಕಷಾಯದ ಬಟ್ಟೆಗಳಿಂದ ತಯಾರಿಸಿದ ಈ ಕೈ ಚೀಲಗಳು ಗುಣಮಟ್ಟದಲ್ಲೂ ಉತ್ತಮವಾಗಿದ್ದು, ಮರುಬಳಕೆಗೆ ಯೋಗ್ಯವಾಗಿವೆ. ಸಂಜೀವಿನಿ ಒಕ್ಕೂಟ ಸಂಘದ ಮಹಿಳೆಯರು ತಯಾರಿಸಿದ ಬಟ್ಟೆಯ ಚೀಲಗಳನ್ನು ಮಂಗಳವಾರ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.