belagavi news:
ತಿರುವನಂತಂಪುರನಲ್ಲಿ ನಡೆದ 2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದು, ಎಡಪಕ್ಷಗಳ ಒಕ್ಕೂಟದ ಹತ್ತು ವರ್ಷಗಳ ಆಡಳಿತಕ್ಕೆ ಅಂತ್ಯವಾಗಿದೆ. ಕಾಂಗ್ರೆಸ್ ನಾಯಕತ್ವದ ಯುಡಿಎಫ್ ಈ ಬಾರಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಫಲಿತಾಂಶ ಕೇವಲ ಸರ್ಕಾರ ಬದಲಾವಣೆಯಷ್ಟೇ ಅಲ್ಲ, ಕೇರಳದ ರಾಜಕೀಯ ಸಮೀಕರಣವನ್ನು ಮರು ರೂಪಿಸುವಂತಾಗಿದೆ.
ದೀರ್ಘಕಾಲ ಅಧಿಕಾರದಲ್ಲಿದ್ದ ಎಡ ಪಕ್ಷಗಳ ಆಡಳಿತ ಅಂತ್ಯಗೊಂಡು, ರಾಜ್ಯ ರಾಜಕೀಯದಲ್ಲಿ ಹೊಸ ದಿಕ್ಕು ಆರಂಭವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಈ ಭರ್ಜರಿ ಗೆಲುವಿನ ಪ್ರಮುಖ ಶ್ರೇಯಸ್ಸು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಅವರಿಗೆ ಸಲ್ಲುತ್ತದೆ ಎಂದು ಹೇಳಲಾಗುತ್ತಿದೆ. ಜೊತೆಗೆ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಕೂಡ ಈ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಗೆಲುವಿನ ನಂತರ ಯುಡಿಎಫ್ ಪಾಳಯದಲ್ಲಿ ಮುಂದಿನ ನಾಯಕತ್ವ ಮತ್ತು ಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚೆಗಳು ಜೋರಾಗಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.
ಹತ್ತು ವರ್ಷಗಳ ನಿರಂತರ ಆಡಳಿತದ ನಂತರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಚುನಾವಣೆಯಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ಅವರ ನೇತೃತ್ವದ ಎಡ ಪಕ್ಷಗಳ ಒಕ್ಕೂಟ ಎಲ್ಡಿಎಫ್ ಗಂಭೀರ ರಾಜಕೀಯ ಒಕ್ಕಟ್ಟಿಗೆ ಸಿಲುಕಿದೆ. ದೇಶದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಆಡಳಿತದಲ್ಲಿದ್ದ ಪ್ರಮುಖ ರಾಜ್ಯಗಳಲ್ಲಿ ಕೇರಳವೆ ಕೊನೆಯ ಭದ್ರಕೋಟೆಯಾಗಿ ಉಳಿದಿದ್ದರೂ, ಈ ಚುನಾವಣಾ ಫಲಿತಾಂಶದೊಂದಿಗೆ ಆಡಳಿತವು ಕಳೆದು ಹೋಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿದೆ.
ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳ ಆರಂಭವಾಗಿದೆ. ಈ ಜನಾದೇಶವು ಎಲ್ಡಿಎಫ್ ಒಳಗಿನ ನಾಯಕತ್ವ, ನೀತಿ ಮತ್ತು ಭವಿಷ್ಯದ ದಿಕ್ಕಿನ ಕುರಿತು ಗಂಭೀರ ಮರು ಪರಿಶೀಲನೆಗೆ ಕಾರಣವಾಗುವ ಸಾಧ್ಯತೆ ಇದೆ. ಕೇರಳದ ರಾಜಕೀಯ ಸಮೀಕರಣಗಳು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹೊಸ ರೂಪ ಪಡೆಯಬಹುದು ಎಂಬ ನಿರೀಕ್ಷಿಸಲಾಗುತ್ತಿದೆ.
ಕೇರಳ ರಾಜಕೀಯದಲ್ಲಿ ಕೆಸಿ ವೇಣುಗೋಪಾಲ್ ಅವರು ಮುಖ್ಯಮಂತ್ರಿ ಹುದ್ದೆಗೆ ಅತ್ಯಂತ ಪ್ರಮುಖ ಸ್ಪರ್ಧಿಯಾಗಿ ಮುನ್ನಡೆಸುತ್ತಿದ್ದಾರೆ. ವಿದ್ಯಾರ್ಥಿ ರಾಜಕೀಯದಿಂದ ಬೆಳೆಯುತ್ತಾ ಬಂದ ಅವರು, ಯಾವುದೇ ಕುಟುಂಬ ರಾಜಕೀಯ ಹಿನ್ನೆಲೆ ಅಥವಾ ಪ್ರಭಾವಿ ಗಾಡ್ ಫಾದರ್ ಬೆಂಬಲವಿಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
ಇಂದು ಅವರು ಕಾಂಗ್ರೆಸ್ ಪಕ್ಷದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಒಳಗಿನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದು, ರಾಹುಲ್ ಗಾಂಧಿ ನಂತರ ಪಕ್ಷದ ಎರಡನೇ ಶಕ್ತಿಶಾಲಿ ನಾಯಕರೆಂದು ಪರಿಗಣಿಸಲಾಗುತ್ತಿದೆ. ಕೇರಳ ಘಟಕದಲ್ಲಿ ತಂತ್ರಗಾರಿಕೆ ರೂಪಿಸುವಲ್ಲಿ ಮತ್ತು ಅಂತಿಮ ನಿರ್ಣಯಗಳಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ. 2021 ರಲ್ಲಿ ಪಕ್ಷದ ಒಳಗಿನ ಮಹತ್ವದ ಬದಲಾವಣೆಯಲ್ಲಿ, ಅವರು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಬದಲಿಸಿ ವಿ.ಡಿ. ಸತೀಸನ್ ಅವರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂಬುದು ಗಮನಾರ್ಹ.
ಈ ನಿರ್ಣಾಯಕ ಚುನಾವಣೆಯಲ್ಲಿ ವೇಣುಗೋಪಾಲ್ ಅವರ ಸಂಘಟನಾ ಸಾಮರ್ಥ್ಯ ಯುಡಿಎಫ್ ಶಿಬಿರವನ್ನು ಒಗ್ಗೂಡಿಸಲು ಸಹಾಯ ಮಾಡಿದೆ. ಪ್ರಚಾರ ನಿಧಿಗಳ ನಿರ್ವಹಣೆ, ನಾಯಕರ ಸಮನ್ವಯ ಮತ್ತು ರಾಷ್ಟ್ರಮಟ್ಟದ ನಾಯಕರ ಭಾಗವಹಿಸುವಿಕೆ ಸೇರಿದಂತೆ ಹೈ ಪ್ರೊಫೈಲ್ ಅಭಿಯಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರು ರಾಜಕೀಯವಾಗಿ “ಕಿಂಗ್ ಮೇಕರ್” ಪಾತ್ರದಲ್ಲಿದ್ದಾರೆ. ಈಗ ಅವರ ಮುಖ್ಯಮಂತ್ರಿ ಭವಿಷ್ಯವು ಪಕ್ಷದ ರಾಷ್ಟ್ರೀಯ ತಂತ್ರ ವಿಶೇಷವಾಗಿ 2029ರ ಲೋಕಸಭಾ ಚುನಾವಣೆಯ ಯೋಜನೆಗಳನ್ನು ನೇರವಾಗಿ ಸಂಪರ್ಕ ಹೊಂದಿದೆ.
ರೇಸ್ ನಲ್ಲಿ ಮೊದಲಿಗರಾಗಿ ಹೊರಹೊಮ್ಮಿದವರು ವಿಡಿ ಸತೀಸನ್, ಯುಡಿಎಫ್ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಈ ಚುನಾವಣೆಯಲ್ಲಿ ಅವರ ನಾಯಕತ್ವವೇ ಗೆಲುವಿನ ಪ್ರಮುಖ ಕಾರಣವೆಂದು ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಕೇಳುತ್ತಿದೆ. ಸೋಲು ಸಂಭವಿಸಿದರೆ ರಾಜಕೀಯದಿಂದ ದೂರವಾಗುತ್ತೇನೆ ಎಂಬ ಅವರ ಘೋಷಣೆ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತ್ತು. ಆ ಹೇಳಿಕೆ ರಾಜಕೀಯ ಜುಟಾಟದಂತೆ ಕಾಣಿಸಿದರೂ, ಅದು ಪಕ್ಷದ ಒಳಗೂ ಹೊರಗೂ ಅವರ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿತು. ಚುನಾವಣೆಯ ವೇಳೆ ಅವರು ಕೋಮು ಸಮೀಕರಣಗಳು ಮತ್ತು ಪಕ್ಷದೊಳಗಿನ ಆಂತರಿಕ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಿದರು.
ನಿರ್ಧಾರಾತ್ಮಕ ಹಾಗೂ ರಾಜಿಯಾಗದ ನಿಲುವುಗಳ ಮೂಲಕ ಯುಡಿಎಫ್ ಶಿಬಿರವನ್ನು ಒಗ್ಗೂಡಿಸಿ ಗೆಲುವಿನ ದಾರಿ ತಂದರು. ಸಾಂಪ್ರದಾಯಿಕ ಕಾಂಗ್ರೆಸ್ ರಾಜಕಾರಣದಿಂದ ಭಿನ್ನವಾಗಿ ಕಾರ್ಯನಿರ್ವಹಿಸಿದ ಸತೀಸನ್ ಅವರ ಶೈಲಿ ಪಕ್ಷದ ಕಾರ್ಯವೈಕರಿಯಲ್ಲಿಯೂ ಬದಲಾವಣೆ ತಂದಿದೆ. ಪಾಲಕ್ಕಾಡ್ ಶಾಸಕರ ವಿಚಾರದಲ್ಲಿ ಅವರ ದೃಢ ನಿಲುವು ಮತ್ತು ಪಿ.ವಿ. ಅನ್ವರ್ ಪ್ರಕರಣದ ಸಂದರ್ಭದಲ್ಲಿ ಎದುರಿಸಿದ ತೀವ್ರ ಸೈಬರ್ ದಾಳಿಗಳ ನಡುವೆಯೂ ಹಿಂದೆ ಸರಿಯದ ಅವರ ಧೈರ್ಯ ಗಮನ ಸೆಳೆದಿದೆ. ಈ ಎಲ್ಲಾ ಕಾರಣಗಳಿಂದ, ಅವರ ನಾಯಕತ್ವವೇ ಯುಡಿಎಫ್ ಗೆಲುವಿನ ಪ್ರಮುಖ ಚಾಲನೆ ಶಕ್ತಿ ಎಂದು ಪರಿಗಣಿಸಲಾಗುತ್ತಿದ್ದು, ಈ ಜಯವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಾರಿ ಉತ್ಸಾಹವನ್ನು ಮೂಡಿಸಿದೆ.
ಮುಖ್ಯಮಂತ್ರಿ ರೇಸ್ ನಲ್ಲಿ ಮತ್ತೊಂದು ಪ್ರಮುಖ ಹೆಸರು ರಮೇಶ್ ಚನ್ನಿತ್ತಲ. ಈಗ ಅವರು ಮಹಾರಾಷ್ಟ್ರದ ಉಸ್ತುವಾರಿ ವಹಿಸಿಕೊಂಡಿರುವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಪಕ್ಷದ ಸಂಘಟನಾ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಒಳಗಿನ ನಾಯಕತ್ವ ಪೈಪೋಟಿಯಲ್ಲಿ ವಿ.ಡಿ.ಸತೀಸನ್ ಮತ್ತು ಕೆವಿ ವೇಣುಗೋಪಾಲ್ ನಡುವೆ ಸ್ಪರ್ಧೆ ಜೋರಾಗಿರುವ ಸಂದರ್ಭದಲ್ಲಿ, ಚೆನ್ನಿತ್ತಲ್ ಅವರ ಹಿರಿತನವು ಗಂಭೀರವಾಗಿ ಪರಿಗಣನೆಗೆ ಬರುತ್ತಿದೆ.
ಪಿಣರಾಯಿ ವಿಜಯನ್ ಅವರ ಮೊದಲ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷದ ನಾಯಕರಾಗಿ ಅವರು ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಿದರು. ಆದರೆ 2021 ರಲ್ಲಿ ಎಡಪಕ್ಷಗಳ ಮರು ಆಡಳಿತವನ್ನು ತಡೆಯುವಲ್ಲಿ ಯಶಸ್ವಿಯಾಗಲಿಲ್ಲ ಎಂಬುದು ಅವರ ರಾಜಕೀಯ ಹಿನ್ನಲೆಯ ಪ್ರಮುಖ ಅಂಶವಾಗಿದೆ. ಈಗ ಅವರು ತಮ್ಮ ಅನುಭವ, ಕಿರೀತನ ಮತ್ತು ಸಂಘಟನಾ ಸಾಮರ್ಥ್ಯವನ್ನು ಆಧರಿಸಿ ಮುಖ್ಯಮಂತ್ರಿಯ ಹುದ್ದೆಯ ರೇಸ್ ನಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ಗೆ ಬಿಟ್ಟಿರುವ ಅವರು, ಹೈದರಾಬಾದ್ ಮತ್ತು ದೆಹಲಿ ಮಟ್ಟದ ರಾಜಕೀಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
Also Read:
ಮಹಾರಾಷ್ಟ್ರ ಪ್ರಕರಣ: ಸಣ್ಣಪುಟ್ಟ ದೌರ್ಜನ್ಯ ಪ್ರಕರಣ: ಪೊಲೀಸ್ ತನಿಖೆ, ಡಿಜಿಟಲ್ ಸಾಕ್ಷ್ಯಾಧಾರಗಳು