belagavi news :
ಧಾರವಾಡ: ಉತ್ತರ ಕರ್ನಾಟಕದಲ್ಲಿ ಸಮರ್ಪಕ ಮಳೆಯಾಗಲೆಂದು ಹಲವು ಸಾಂಪ್ರದಾಯಿಕ ಆಚರಣೆಗಳನ್ನು ನಡೆಸುವ ಪದ್ಧತಿ ಇದೆ ಇಂದಿಗೂ ಮುಂದುವರೆದಿದೆ. ಈ ಬಾರಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಗ್ರಾಮಸ್ಥರು ಮಳೆಯಾಗಲೆಂದು ಕತ್ತೆ ಹಾಗೂ ಕಪ್ಪೆಗೆ ಸಾಂಪ್ರದಾಯಿಕವಾಗಿ ಮದುವೆ ಮಾಡುವ ವಿಶಿಷ್ಟ ಆಚರಣೆ ನಡೆಸಿದ್ದಾರೆ.
ಪೂರ್ವ ಮುಂಗಾರು ಉತ್ತಮವಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿ, ಶೇ.60ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರು. ಆದರೆ ನಂತರ ಅಗತ್ಯ ಸಮಯದಲ್ಲಿ ಮಳೆಯ ಕೊರತೆ ಎದುರಾದ ಪರಿಣಾಮ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆತಂಕಗೊಂಡ ರೈತರು ಮಳೆಗಾಗಿ ದೇವರ ಮೊರೆ ಹೋಗುವುದರ ಜೊತೆಗೆ ಸಾಂಪ್ರದಾಯಬದ್ಧ ಆಚರಣೆಗಳನ್ನು ನಡೆಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಕತ್ತೆ ಮತ್ತು ಕಪ್ಪೆಗೆ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಿದರು. ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿ ವಿಧಾನಗಳು ನಡೆಸಿ ಗ್ರಾಮದವರು ಸಮ್ಮುಖದಲ್ಲಿ ಈ ವಿಶಿಷ್ಟ ಆಚರಣೆ ನೆರವೇರಿಸಲಾಯಿತು. ಮಳೆ ಸುರಿಯಲಿ ಎಂಬ ಆಶಯದಿಂದ ನಡೆದ ಈ ಸಂಪ್ರದಾಯ ಇದೀಗ ಗಮನ ಸೆಳೆಯುತ್ತಿದೆ.
ಕತ್ತೆಗಳಿಗೆ ನಾಮಕರಣ: ಮಳೆಯಾಗಲಿ ಎಂಬ ನಂಬಿಕೆಯಿಂದ ನಡೆದ ವಿಶಿಷ್ಟ ಆಚರಣೆಯಲ್ಲಿ ಗಂಡು ಕತ್ತೆಗೆ " ಕಾಂತೇಶ್ " ಹಾಗೂ ಹೆಣ್ಣು ಕತ್ತೆಗೆ " ಕಸ್ತೂರಿ" ಎಂದು ನಾಮಕರಣ ಮಾಡಲಾಗಿತ್ತು. ಗ್ರಾಮದಲ್ಲಿ ಎರಡು ಪಂಗಡಗಳನ್ನು ಮಾಡಿಕೊಂಡು ಒಂದು ಪಂಗಡ ವರನ ಕಡೆಯವರಾಗಿಯೂ ಮತ್ತೊಂದು ಪಂಗಡ ವಧುವಿನ ಕಡೆಯವರಾಗಿಯೂ ಕಾರ್ಯನಿರ್ವಹಿಸಿದರು.
ಬೆಳಗ್ಗೆಯಿಂದಲೇ ವರನ ಮನೆಯಿಂದ ಬಾಸಿಂಗ ಸ್ವೀಕರಿಸಿ ವಧುವಿನ ಮನೆ ಕಡೆಗೆ ಮೆರವಣಿಗೆ ನಡೆಸಲಾಯಿತು. ನಂತರ ಗ್ರಾಮದಲ್ಲೆಡೆ ಸಂಚರಿಸಿ ಮದುವೆ ವೇದಿಕೆಗೆ ಜೋಡಿಯನ್ನು ಕರೆತರಲಾಯಿತು. ಅಲ್ಲಿ ನೆರೆದಿದ್ದ ಜನರ ನಡುವೆ ಮಂತ್ರ ಘೋಷಗಳು ಮೊಳಗಿದವು. ವಧು-ವರರ ಕಡೆಯ ಪುರೋಹಿತರು ಶಾಸ್ತ್ರೋಕ್ತ ಮಂತ್ರೋಚ್ಚಾರಣೆ ನೆರವೇರಿಸಿದರು.
ಬಳಿಕ ಕಾಂತೇಶ್ - ಕಸ್ತೂರಿ ಜೋಡಿಯನ್ನು ವೇದಿಕೆಗೆ ಕರೆತಂದು, ಮಾಂಗಲ್ಯ ಹಾಗೂ ಬಾಸಿಂಗ ಪೂಜೆಯನ್ನು ದೇವಸ್ಥಾನದಲ್ಲಿ ನಡೆಸಲಾಯಿತು. ನಂತರ ಸಂಪ್ರದಾಯಬದ್ಧ ವಿಧಿವಿಧಾನಗಳ ಮೂಲಕ ವಿವಾಹ ನೆರವೇರಿಸಲಾಯಿತು. ಇದೇ ವೇಳೆ ಕಪ್ಪೆಗಳಿಗೂ ಮದುವೆ ಮಾಡಿಸಲಾಯಿತು. ಮಳೆಗಾಗಿ ಈ ರೀತಿಯ ಆಚರಣೆ ಮಾಡಿದರೆ ವರುಣ ದೇವರನ್ನು ಪ್ರಸನ್ನನಾಗುತ್ತಾನೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.
ಭಾರಿ ಮಳೆಯ ಸೂಚನೆ ಕೊಟ್ಟ ಹವಮಾನ ಇಲಾಖೆ: ಜುಲೈ ತಿಂಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಸೂಚನೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂದು ಭಾರತೀಯ ಹವಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಮುಂದಿನ ಆರು ದಿನಗಳಲ್ಲಿ ಕೇರಳ, ಕರಾವಳಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಅದರಲ್ಲೂ ಕೇರಳ, ಕರಾವಳಿ ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈ ಮುನ್ಸೂಚನೆಯಿಂದ ಮಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ಕೆಲಮಟ್ಟಿನ ನೆಮ್ಮದಿ ದೊರಕುವ ಸಾಧ್ಯತೆ ಇದೆ.