balagavi news:
ಲಕ್ನೋ/ಬೆಂಗಳೂರು: ಉತ್ತರ ಪ್ರದೇಶವನ್ನು ದೇಶದ ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸುವ ಗುರಿಯೊಂದಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ನಿರಂತರ ಪ್ರಯತ್ನಗಳನ್ನು ಮುಂದುವರಿಸಿದೆ. ಕೈಗಾರಿಕೆ, ಮೂಲಸೌಕರ್ಯ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯವು ಹೂಡಿಕೆದಾರರನ್ನು ಸೆಳೆಯಲು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಜಾಗತಿಕ ಬೆಳವಣಿಗೆ ಸಂವಾದ-2026 ಅಂಗವಾಗಿ ಇಂದು ಬೆಂಗಳೂರಿನಲ್ಲಿ ವಿಶೇಷ ಹೂಡಿಕೆದಾರರ ರೋಡ್ ಶೋ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಹಿಸಲಿದ್ದು, ರಾಜ್ಯದಲ್ಲಿ ಲಭ್ಯವಿರುವ ಹೂಡಿಕೆ ಅವಕಾಶಗಳು, ಕೈಗಾರಿಕಾ ನೀತಿಗಳು ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಉದ್ಯಮ ವಲಯಕ್ಕೆ ಮಾಹಿತಿ ನೀಡಲಿದ್ದಾರೆ.
ರೋಡ್ ಶೋದಲ್ಲಿ ದೇಶದ ಹಲವು ಪ್ರಮುಖ ಕೈಗಾರಿಕೋದ್ಯಮಿಗಳು, ಹೂಡಿಕೆದಾರರು ಹಾಗೂ ಉದ್ಯಮ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶದಲ್ಲಿ ಹೂಡಿಕೆ, ಉತ್ಪಾದನಾ ಘಟಕಗಳ ಸ್ಥಾಪನೆ ಹಾಗೂ ಹೊಸ ಉದ್ಯಮ ಅವಕಾಶಗಳ ಕುರಿತು ಚರ್ಚೆಗಳು ನಡೆಯಲಿದ್ದು, ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಬೆಂಗಳೂರಿನ ಈ ರೋಡ್ ಶೋ ಉತ್ತರ ಪ್ರದೇಶದ ಹೂಡಿಕೆ ಸಾಮರ್ಥ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಗಿದ್ದು, ಉದ್ಯಮ ವಲಯದ ಗಮನ ಸೆಳೆದಿದೆ.
ಉದ್ಯಮಿಗಳೊಂದಿಗೆ ಮಹತ್ವದ ಸಮಾಲೋಚನೆ:
ಉತ್ತರ ಪ್ರದೇಶದ ಅಭಿವೃದ್ಧಿ ಪಥ, ಉದ್ಯಮಿ ಸ್ನೇಹಿ ವಾತಾವರಣ ಹಾಗೂ ವಿವಿಧ ವಲಯಗಳಲ್ಲಿ ಲಭ್ಯವಿರುವ ಅಪಾರ ಹೂಡಿಕೆ ಅವಕಾಶಗಳ ಕುರಿತು ಉತ್ತರ ಪ್ರದೇಶದ ಜಾಗತಿಕ ಬೆಳವಣಿಗೆ ಸಂವಾದ 2026ರಲ್ಲಿ ವ್ಯಾಪಕ ಚರ್ಚೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಐಟಿ- ಸಕ್ರಿಯಗೊಳಿಸಿದ ಸೇವೆಗಳು (ITES), ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಹಾಗೂ ವಿದೇಶಿ ನೇರ ಹೂಡಿಕೆ (FDI) ಕುರಿತಂತೆ ಮೂರು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದೆ. ಈ ಪ್ರಮುಖ ಕ್ಷೇತ್ರಗಳ ಗಣ್ಯ ಉದ್ಯಮಿಗಳು ಹಾಗೂ ಹೂಡಿಕೆದಾರರು ಭಾಗವಹಿಸಿ ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ.
ಉತ್ತರ ಪ್ರದೇಶದಲ್ಲಿನ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ನಡೆಯಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ಅಭಿವೃದ್ಧಿ ಸಾಧನೆಗಳು ಹಾಗೂ ಭವಿಷ್ಯದ ಸಾಧ್ಯತೆಗಳನ್ನು ಒಳಗೊಂಡ ಕಿರುಚಿತ್ರವೊಂದನ್ನು ಪ್ರದೇಶಿಸಲಾಗುತ್ತದೆ. ಕಾರ್ಯಕ್ರಮವು ರಾಜ್ಯವನ್ನು ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿ ಪರಿಚಯಿಸುವ ಪ್ರಮುಖ ವೇದಿಕೆಯಾಗಲಿದೆ.
ಉದಯೋನ್ಮುಖ ವ್ಯಾಪಾರ ಅವಕಾಶಗಳ ಬಗ್ಗೆ ವಿವರಣೆ:
ಭಾರತದ ' ಸಿಲಿಕಾನ್ ವ್ಯಾಲಿ ' ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳ ಮುಂದೆ ಉತ್ತರ ಪ್ರದೇಶದ ವೇಗವಾಗಿ ಅಭಿವೃದ್ಧಿ ಹೂಡಿಕೆ ಸ್ನೇಹಿ ನೀತಿಗಳು ಹಾಗೂ ವಿವಿಧ ವಲಯಗಳಲ್ಲಿ ಮೂಡಿಬರುತ್ತಿರುವ ಅಪಾರ ವ್ಯಾಪಾರ ಅವಕಾಶಗಳನ್ನು ಪರಿಚಯಿಸುವುದು ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ದೃಢವಾದ ಮೂಲಸೌಕರ್ಯ, ಬಲಿಷ್ಠ ಕಾನೂನು ಮತ್ತು ಸುವ್ಯವಸ್ಥೆ, ಹೂಡಿಕೆ ಪ್ರೋತ್ಸಾಹಕ ವಲಯ ನೀತಿಗಳು, ವಿಸ್ತೃತ ಎಕ್ಸ್ಪ್ರೆಸ್ ವೇ ಜಾಲ, ರಕ್ಷಣಾ ಕೈಗಾರಿಕಾ ಕಾರಿಡಾರ್, ಅತ್ಯಾಧುನಿಕ ಡೇಟಾ ಸೆಂಟರ್ ಪಾರ್ಕ್ ಗಳು ಹಾಗೂ ವಿದ್ಯುತ್ ವಾಹನ (EV) ಮತ್ತು ಲಭ್ಯವಿರುವ ವಾಣಿಜ್ಯ ಮತ್ತು ಕೈಗಾರಿಕ ಅವಕಾಶಗಳ ಬಗ್ಗೆ ಸಮಗ್ರ ಚಿತ್ರಣ ನೀಡಲಾಗುತ್ತದೆ.
ವಿಶೇಷವಾಗಿ, ಏಕ- ಗವಾಕ್ಷಿ ಅನುಮೋದನೆ ವ್ಯವಸ್ಥೆ, ವಿಶಾಲ ಭೂ ಬ್ಯಾಂಕ್, ಕೌಶಲ್ಯಯುತ ಮಾನವ ಸಂಪತ್ಮೂಲ ಮತ್ತು ಆಕರ್ಷಕ ಪ್ರೋತ್ಸಾಹಕ ನೀತಿಗಳ ಬಲದಿಂದ ಉತ್ತರ ಪ್ರದೇಶವು ಕಳೆದ 9 ವರ್ಷಗಳಲ್ಲಿ ಹೂಡಿಕೆದಾರರ ಅತ್ಯಂತ ವಿಶ್ವಾಸಾರ್ಹ ಮತ್ತು ಆದ್ಯತೆಯ ತಾಣವಾಗಿ ಹೊರಹೊಮ್ಮಿದೆ. ಹೂಡಿಕೆ ಸ್ನೇಹಿ ಪರಿಸರ ಮತ್ತು ವೇಗವಾಗಿ ಆರ್ಥಿಕ ಬೆಳವಣಿಗೆಯ ಮೂಲಕ ರಾಜ್ಯವು ದೇಶದ ಪ್ರಮುಖ ಹೂಡಿಕೆ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.