Belagavi news:
ಬೆಳಗಾವಿ: ಉದ್ಯಮಿ ಶಿವಾನಂದ್ ನೀಲಣ್ಣವರ್ ಅವರಿಗೆ ಸೇರಿದ ಶಿವಂ ಅಸೋಸಿಯೇಟ್ಸ್ ಕಚೇರಿಗಳ ಮೇಲೆ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಧಾಖಲೆಗಳ ಪರಿಶೀಲನೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ.
ನಗರದ ಶಿವಬಸವ ನಗರದಲ್ಲಿರುವ ಶಿವಾನಂದ್ ನೀಲಣ್ಣವರಗೆ ಸೇರದ ಎರಡು ಕಚೇರಿಗಳ ಮೇಲೆ ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ ನೇತೃತ್ವದ ತಂಡ ದಾಳಿ ನಡೆಸಿತು. ಮಾಳಮಾರುತಿ ಠಾಣೆ ಪೊಲೀಸರ ಭದ್ರತೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧಿಕಾರಿಗಳು ಮಧ್ಯಾಹ್ನದಿಂದಲೇ ಕಚೇರಿಯಲ್ಲಿ ತಪಾಸಣೆ ಆರಂಭಿಸಿದರು.
ಹಣಕಾಸು ವ್ಯವಹಾರ, ಹೂಡಿಕೆ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ವಿವಿಧ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿಗೆ ಶಿವಾನಂದ್ ನೀಲಣ್ಣವರ ನೀಡಿದ ಕೆಲ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದ ಹಿನ್ನೆಲೆ, ದಾಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ.
ದಾಳಿಯ ಬಳಿಕ ಕಚೇರಿ ಸುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿರುವ ಸಾದ್ಯತೆಯು ಇದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ .
ಉದ್ಯಮಿ ಶಿವಾನಂದ ನೀಲಣ್ಣವರ ಅವರ ಹೇಳಿಕೆಗಳು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಕಡೂರಿನಲ್ಲಿ ನಡೆದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು,"ನನ್ನ ಬಳಿ 15,000 ಬಂದೂಕುಗಳಿವೆ. ನಾನು ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ಯಾರಿಗೂ ಹೆದರಲ್ಲ. 2028 ರಲ್ಲಿ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗಿ ತೋರಿಸುತ್ತೇನೆ" ಎಂದು ಹೇಳಿಕೆ ನೀಡಿದ್ದರು.
ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆ ಹುಟ್ಟು ಹಾಕಿದ್ದು, ಸಾರ್ವಜನಿಕ ವಲಯದಲ್ಲೂ ಪರ ವಿರೋಧ ಚರ್ಚೆಗೆ ಕಾರಣವಾಗಿದ್ದವು. ಅಲ್ಲದೆ, "ಓಂ ನಮಃ ಶಿವಾಯ" ಎಂದು ಭಾಷಣ ಆರಂಭಿಸುವ ಅವರ ಶೈಲಿ ಸಹ ಟ್ರೆಂಡ್ ಆಗಿತ್ತು.
ವೇದಿಕೆ ಮೇಲಿನ ಭಾಷಣಗಳಲ್ಲಿ "ನಾನು ಶಿವನ ಅವತಾರ.... ನಿಮ್ಮೆಲ್ಲರನ್ನು ಉದ್ಧಾರ ಮಾಡಲು ಬಂದಿದ್ದೇನೆ" ಎಂಬ ಹೇಳಿಕೆಗಳನ್ನು ನೀಡುತ್ತಿದ್ದ ಶಿವಾನಂದ್ ನೀಲಣ್ಣವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಗಮನ ಸೆಳೆದಿದ್ದವು.
ಇದರ ಬೆನ್ನಲ್ಲೇ ಮೇ 17 ರಂದು "ಸ್ವಚ್ಛ ಬೆಳಗಾವಿ ಸಂಭ್ರಮ" ಹೆಸರಿನಲ್ಲಿ 25,000 ಹೆಚ್ಚು ಜನರನ್ನು ಸೇರಿಸಿ ಬಾರಿ ಸ್ವಚ್ಛತಾ ಅಭಿಯಾನ ಹಾಗೂ ಸರದಾರ್ಸ್ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಶಿವಾನಂದ್ ನೀಲಣ್ಣವರ ಭರದ ಸಿದ್ಧತೆ ನಡೆಸಿದ್ದರು.
ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಭಾರಿ ಪ್ರಮಾಣದ ಕಟೌಟ್ ಗಳು ಮತ್ತು ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಆದರೆ, ಅವುಗಳನ್ನು ಅನಧಿಕೃತವಾಗಿ ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆ ಇಂದು ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಅವುಗಳನ್ನು ತೆರವುಗೊಳಿಸಿದರು.
ಕಟೌಟ್ ತೆರವು ಕಾರ್ಯಾಚರಣೆ ನಡೆದ ಕೆಲವು ಗಂಟೆಗಳಲ್ಲಿ ಶಿವಾನಂದ್ ನೀಲಣ್ಣವರ ಸೇರಿದ ಕಚೇರಿಗಳ ಮೇಲೆ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳು ಹಣಕಾಸು ವ್ಯವಹಾರ, ಹೂಡಿಕೆ ಮತ್ತು ಧಾಖಲೆಗಳ ಪರಿಶೀಲನೆಯನ್ನು ಮುಂದುವರಿಸಿದ್ದು, ಪ್ರಕರಣ ಈದೀಗ ಬೆಳಗಾವಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Also Read: