belagavi news:
ಬೆಳಗಾವಿ: ಹೆಣ್ಣು ಕೊಟ್ಟ ಅತ್ತೆಯನ್ನು ದೇವರಿಗೆ ಸಮಾನವೆಂದು ಗೌರವಿಸುವ ಸಾಂಪ್ರದಾಯ ಇರುವುದಾದರೂ, ಅದೇ ಅತ್ತೆಯ ಮೇಲೆ ಅಳಿಯನಿಂದ ಚಾಕು ಇರಿತ ನಡೆದ ಘಟನೆ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅರವಿಂದ್ ಗವಳಿ ಎಂಬಾತ ಈ ಕೃತ್ಯ ಎಸಗಿದ ಆರೋಪಿ ಯಾಗಿದ್ದು, ಮಹಾದೇವಿ ಕರಿಗಾರ್ ಎಂಬವರು ಗಾಯಗೊಂಡ ಅತ್ತೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳೆಯ ವರ್ಷ ವಷ್ಟೇ ಅರವಿಂದ್ ಮದುವೆಯಾಗಿದ್ದು ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ. ಮಗು ಹುಟ್ಟಿದ ಬಳಿಕದಿಂದಲೇ ಮಗುವನ್ನು ನೋಡುವ ಆಸೆಯಿಂದ ಅರವಿಂದ್ ಪದೇ ಪದೇ ಪತ್ನಿಗೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಕುಟುಂಬಸ್ಥರು ಆರಂಭಿಸಿದ್ದಾರೆ . ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಕಲಹ ಹೆಚ್ಚಾಗಿದ್ದು ಘಟನೆ ನಡೆದಿರುವುದು ತಿಳಿದು ಬಂದಿದೆ.
ವಿಡಿಯೋ ಕಾಲ್ ವೇಳೆ ಮೊಬೈಲ್ ಹಿಡಿದು ಕೈ ನೋವಾಗುತ್ತದೆ ಎಂದು ಅರವಿಂದನ ಪತ್ನಿ ಹೇಳಿದರು ಆತ ಕೇಳದೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಡ - ಹೆಂಡತಿಯ ಮಧ್ಯೆ ಅತ್ತೆ ಮಹದೇವಿ ಪ್ರವೇಶಿಸಿ ಅಳಿಯನಿಗೆ ಬುದ್ಧಿ ಮಾತು ಹೇಳಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಕೋಪಗೊಂಡ ಅರವಿಂದ್ ಅತ್ತೆ ಮಹಾದೇವಿ ಅವರ ಹೊಟ್ಟೆಗೆ ಚಾಕು ಇರಿದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಾದೇವಿ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇಸ್ ಸಂಬಂಧ ಮುರುಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಅರವಿಂದನನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಲ್ಲೆಗೊಳಗಾದ ಮಹದೇವಿ ಕರಿಗಾರ್ ಅವರ ಪುತ್ರ ಮಲ್ಲಿಕಾರ್ಜುನ್ ಕರಿಗಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಅರವಿಂದ್ ಪದೇ ಪದೇ ವಿಡಿಯೋ ಕಾಲ್ ಮಾಡಿ ತನ್ನ ತಂಗಿಯನ್ನು ಪೀಡಿಸುತ್ತಿದ್ದನು ಎಂದು ಆರೋಪಿಸಿದ್ದಾರೆ."ನನಗೆ ಹುಟ್ಟಿದ ಮಗನನ್ನು ತೋರಿಸುವುದಿಲ್ಲ" ಎಂದು ಅವನು ಆಗಾಗ್ಗೆ ಹೇಳುತ್ತಿದ್ದನೆಂದು ತಿಳಿಸಿದ್ದಾರೆ.
ಮೇ 2ರಂದು " ನನಗೆ ಸುಸ್ತಾಗಿದೆ ಕೈ ನೋವಾಗುತ್ತಿದೆ ನಂತರ ವಿಡಿಯೋ ಕಾಲ್ ಮಾಡುತ್ತೇನೆ" ಎಂದು ತನ್ನ ತಂಗಿ ಕರೆ ಕಡಿತಗೊಳಿಸಿದ್ದಳು. ಇದರಿಂದ ಸಿಟ್ಟುಗೊಂಡ ಅರವಿಂದ್ ಮತ್ತೆ ಕರೆ ಮಾಡಿ, "ನನಗೆ ಹುಟ್ಟಿದ ಮಗನನ್ನು ತೋರಿಸಲೇಬೇಕು"ಎಂದು ಒತ್ತಾಯಿಸಿ ಮನೆಯವರನ್ನೆಲ್ಲ ಅಸಭ್ಯವಾಗಿ ಬೈದಿದ್ದಾನೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ್ ಅವರ ಹೇಳಿಕೆಯ ಪ್ರಕಾರ, "ಅರವಿಂದ್ ಮತ್ತೆ ಕರೆ ಮಾಡಿದಾಗ ನಮ್ಮ ತಾಯಿ ಫೋನ್ ತೆಗೆದುಕೊಂಡು,'ನಮ್ಮನ್ನು ಯಾಕೆ ಬೈಯುತ್ತಿದ್ದಿಯಾ? ಗಂಡ -ಹೆಂಡ್ತಿ ಜಗಳ ನಿಮ್ಮೊಳಗೆ ಇಟ್ಟುಕೊಳ್ಳಿ'ಎಂದು ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಅವನು 'ನಾನು ನಿಮ್ಮನೆ ಬೈಯ್ಯುತ್ತೇನೆ, ಏನು ಮಾಡ್ಕೊಳ್ತೀರೋ ಮಾಡ್ಕೊಳ್ಳಿ , ಅಲ್ಲಿಗೆ ಬಂದು ನೋಡಿಕೊಳ್ಳುತ್ತೇನೆ, ಯಾರು ಉಳಿಸಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾನೆ"ಎಂದು ಹೇಳಿದ್ದಾರೆ.
"ಇದಾದ ಸುಮಾರು ಒಂದುವರೆ ಗಂಟೆಯೊಳಗೆ ಮನೆಗೆ ಬಂದ ಅರವಿಂದ್,'ಫೋನಿನಲ್ಲಿ ತುಂಬಾ ಮಾತನಾಡುತ್ತಿದ್ದೀಯಾ' ಎಂದು ಹೇಳುತ್ತಾ ಏಕಾಏಕಿ ನಮ್ಮ ತಾಯಿಯ ಹೊಟ್ಟೆಗೆ ಚಾಕು ಇರಿದಿದ್ದಾನೆ. ಆಗ ನಾನು ಸೇರಿದಂತೆ ಹಲವರು ಸೇರಿ ಅವನನ್ನು ತಡೆಯಲು ಪ್ರಯತ್ನಿಸಿದ್ದೇವೆ. ಜಗಳದ ಶಬ್ದ ಕೇಳಿ ಅಕ್ಕ ಪಕ್ಕದವರು ಬರುತ್ತಿದ್ದಂತೆ ಅಂತ ಅಲ್ಲಿಂದ ಪರಾರಿಯಾಗಿದ್ದಾನೆ," ಎಂದು ವಿವರಿಸಿದರು.
ಗಾಯಗೊಂಡ ತಾಯಿಯನ್ನು ಮೊದಲು ಯರಗಟ್ಟಿ ಸರ್ಕಾರ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ."ನಂತರ ಮತ್ತೆ ಫೋನ್ ಮಾಡಿದ ಅರವಿಂದ್, 'ನಿನ್ನ ಮತ್ತು ನಿಮ್ಮ ಮನೆಯ ಯಾರನ್ನು ಬಿಡುವುದಿಲ್ಲ, ಎಲ್ಲರನ್ನೂ ಮುಗಿಸುತ್ತೇನೆ' ಎಂದು ಜೀವ ಬೆದರಿಕೆ ಹಾಕಿದ್ದಾನೆ"ಎಂದು ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
Also Read: