ಪಿಎಂ ಕಿಸಾನ್ ಯೋಜನೆ; 9 ಕೋಟಿ ರೈತರಿಗೆ 2,000 ರೂಗಳ 21ನೇ ಕಂತಿನ ಹಣ ಇಂದು ಬಿಡುಗಡೆ
ಪಿಎಂ ಕಿಸಾನ್ ಯೋಜನೆ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 21ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಅವರು ನ. 19, ಬುಧವಾರ ಬಿಡುಗಡೆ ಮಾಡುತ್ತಿದ್ದಾರೆ. ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿ ಮಧ್ಯಾಹ್ನ ಕೊಯಮತ್ತೂರಿಗೆ ತೆರಳುತ್ತಿದ್ದಾರೆ. ಕೊಯಮತ್ತೂರಿನಲ್ಲಿ ನೈಸರ್ಗಿಕ ಕೃಷಿ ಶೃಂಗಸಭೆಗೆ ಚಾಲನೆ ನೀಡಿದ ಬಳಿಕ ಪಿಎಂ ಕಿಸಾನ್ನ ಹೊಸ ಕಂತಿನ ಹಣದ ಬಿಡುಗಡೆ ಮಾಡುತ್ತಾರೆ.
ಕೊಯಮತ್ತೂರು:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 21ನೇ ಕಂತಿನ ಹಣವನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ನೈಸರ್ಗಿಕ ಕೃಷಿ ಶೃಂಗಸಭೆ (Natural Farming Summit) ಉದ್ಘಾಟಿಸುವ ವೇಳೆ ಪಿಎಂ ಕಿಸಾನ್ ಹಣವನ್ನೂ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 1:30ರಿಂದ 2 ಗಂಟೆಯ ಅವಧಿಯಲ್ಲಿ ಇದರ ಬಿಡುಗಡೆ ಆಗುವ ನಿರೀಕ್ಷೆ ಇದೆ. 9 ಕೋಟಿ ರೈತರಿಗೆ (Farmer) ಒಟ್ಟು 18,000 ಕೋಟಿ ರೂಗೂ ಅಧಿಕ ಹಣ ಸಂದಾಯವಾಗಲಿದೆ.
ಸಂಖ್ಯೆ ಕಡಿಮೆ ಆಗಲು ಏನಿರಬಹುದು ಕಾರಣ:
ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಲು ಕೆಲವಾರು ನಿಯಮಗಳಿವೆ. ರೈತರಿಗೆಂದು ರೂಪಿಸಲಾದ ಸ್ಕೀಮ್ ಆದರೂ ಎಲ್ಲಾ ರೈತರೂ ಫಲಾನುಭವಿಗಳಾಗಲು ಬರುವುದಿಲ್ಲ. ಅನರ್ಹ ಫಲಾನುಭವಿಗಳನ್ನು ಹುಡುಕಿ, ಅವರನ್ನು ಪಟ್ಟಿಯಿಂದ ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಇಕೆವೈಸಿ ಅಪ್ಡೇಟ್ ಮಾಡದವರನ್ನೂ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಹೀಗಾಗಿ, ಪಿಎಂ ಕಿಸಾನ್ ಸ್ಕೀಮ್ನಲ್ಲಿ 21ನೇ ಕಂತಿನ ಹಣ ಸಂದಾಯವಾಗುವವರ ಸಂಖ್ಯೆ ಕಡಿಮೆ ಆಗುತ್ತಿದೆ.
ಫಲಾನುಭವಿಗಳ ಸಂಖ್ಯೆ ಕಡಿಮೆ ಆಗಿದೆಯಾ:
ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾದ 20ನೇ ಕಂತಿನ ಹಣವನ್ನು 9,71,41,402 ರೈತರು ಪಡೆದಿದ್ದರು. ಅದಕ್ಕೂ ಹಿಂದಿನ 10ನೇ ಕಂತಿನ ಹಣವನ್ನು 10.07 ಕೋಟಿ ರೈತರು ಪಡೆದಿದ್ದರು. ಆದರೆ, 21ನೇ ಕಂತಿನ ಹಣವು ಪಡೆಯುವವರ ಸಂಖ್ಯೆ 9 ಕೋಟಿಯಷ್ಟು ಇರಬಹುದು. ಹಿಂದಿನ ಕಂತು ಪಡೆದವರಿಗಿಂತ ಈ ಬಾರಿ 50 ಲಕ್ಷಕ್ಕೂ ಅಧಿಕ ಸಂಖ್ಯೆ ಕಡಿಮೆ ಆಗಲಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿಕೊಳ್ಳುವುದು ಹೇಗೆ?
ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ ಮೂಲಕ ರಿಜಿಸ್ಟರ್ ಮಾಡುವ ಕ್ರಮ ಇಲ್ಲಿದೆ:
ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ ವಿಳಾಸ :
ಮುಖ್ಯಪುಟದಲ್ಲಿ ಕೆಳಗೆ ತುಸು ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ನೋಡಬಹುದು.
ಅಲ್ಲಿ ‘ನ್ಯೂ ಫಾರ್ಮರ್ ರಿಜಿಸ್ಟ್ರೇಶನ್’ ಅನ್ನು ಕ್ಲಿಕ್ ಮಾಡಿ.
ಇಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು. ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ನಂತರ ಒಟಿಪಿ ಪಡೆದು ಮುಂದುವರಿಯಿರಿ.
ಇಲ್ಲಿ ನೀವು ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ನಿಮ್ಮ ಹೆಸರು, ಭೂಮಿಯ ವಿವರ, ಪಹಣಿಯ ಪ್ರತಿ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.
ನಂತರ ಸೇವ್ ಕ್ಲಿಕ್ ಮಾಡಿರಿ.
ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರವಾ ಪಿಎಂ ಕಿಸಾನ್ ಹಣ:
ಹಾಗೆಯೇ, 2019ರ ಫೆಬ್ರುವರಿ 1ರ ನಂತರ ಜಮೀನು ಪಡೆದವರಿಗೂ ಪಿಎಂ ಕಿಸಾನ್ ಹಣ ಸಿಗುವುದಿಲ್ಲ. ಅಪ್ಪ ಬದುಕಿರುವಾಗಲೀ ಮಗ ಜಮೀನು ವರ್ಗಾವಣೆ ಮಾಡಿಕೊಂಡರೆ ಆಗಲೂ ಹಣ ಸಿಗುವುದಿಲ್ಲ.
ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಜಮೀನು ಮಾಲಕತ್ವ ಹೊಂದಿದ್ದರೂ ಅವರೆಲ್ಲರೂ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯುವ ಅವಕಾಶ ಸದ್ಯಕ್ಕೆ ಇಲ್ಲ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಹಣ ಸಿಗುತ್ತದೆ.
ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡುವುದು ಹೇಗೆ:
ಈ ಹಿಂದೆ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಂಡವರು ತಪ್ಪದೇ ಇಕೆವೈಸಿ ಮಾಡಿಸಬೇಕು. ಸಮೀಪದ ನಾಡಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ (ಸಿಎಸ್ಸಿ) ಹೋಗಿ ಅಲ್ಲಿ ಬಯೋಮೆಟ್ರಿಕ್ ನೀಡಿ ಇಕೆವೈಸಿ ಮಾಡಿಸಬಹುದು. ಅಲ್ಲಿಗೆ ಹೋಗಲಾರದವರು ಪಿಎಂ ಕಿಸಾನ್ ಪೋರ್ಟಲ್ನಲ್ಲಿ ಒಟಿಪಿ ನೀಡಿ ಇಕೆವೈಸಿ ಮಾಡಿಸಬಹುದು. ಹಾಗೆಯೇ, ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮತ್ತು ಆಧಾರ್ ಫೇಸ್ ಆರ್ಡಿ ಆ್ಯಪ್ಗಳ ಮೂಲಕವೂ ಇಕೆವೈಸಿ ಮಾಡಿಸಬಹುದು.
ಇನ್ನಷ್ಟು ಓದಿರಿ:
ಜೈಲಿನ ಪ್ರಕರಣ: ವಿಜಯಲಕ್ಷ್ಮೀ ಹೆಸರು ಹೇಳಿದ ಧನ್ವೀರ್