ಕನ್ನಡದ ಕೆಜಿಎಫ್, ಕಾಂತಾರ, ಸು ಫ್ರಮ್ ಸೋ ಸಿನಿಮಾಗಳು ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಈ ಸಂದರ್ಭದಲ್ಲಿ ಬಾಲಿವುಡ್ನ ಎವರ್ ಗ್ರೀನ್ ಹೀರೋ ಅನಿಲ್ ಕಪೂರ್ ಅವರು ತಾವು ಅಭಿನಯಿಸಿದ ಮೊದಲ ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ'ಯನ್ನು ನೆನಪಿಸಿಕೊಂಡಿದ್ದಾರೆ.
'ಈ ಸಿನಿಮಾದ ಕಥೆಯನ್ನು ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಕೆಲ ಸ್ಟಾರ್ ನಟರು ರಿಜೆಕ್ಟ್ ಮಾಡಿದ್ರಂತೆ. 20ಕ್ಕೂ ಹೆಚ್ಚು ಸಿನಿಮಾ ಪ್ರೊಡಕ್ಷನ್ ಹೌಸ್ಗಳಿಂದ ರಿಜೆಕ್ಟ್ ಆಗಿ ಬಂದಿದ್ದ ಕಥೆ ಅದು. ಕೊನೆಗೆ ಆ ಚಿತ್ರ ಕನ್ನಡಕ್ಕೆ ಬಂದು, ಇತಿಹಾಸ ಸೃಷ್ಟಿಸಿ ಅನಿಲ್ ಕಪೂರ್ ಹಾಗೂ ನಿರ್ದೇಶಕ ಮಣಿರತ್ನಂಗೆ ಸ್ಟಾರ್ ಡಮ್ ತಂದು ಕೊಡ್ತು' ಎಂದು ಮಾಹಿತಿ ನೀಡಿದ್ದಾರೆ.
43 ವರ್ಷಗಳ ಹಿಂದೆ, ನಾನು ಕನ್ನಡ ಚಿತ್ರರಂಗಕ್ಕೆ ನನ್ನ ಮೊದಲ ಹೆಜ್ಜೆ ಇಟ್ಟಿದ್ದೆ. ಅಂದಿನಿಂದ ಇಲ್ಲಿಯವರೆಗೆ, ಕನ್ನಡ ಚಿತ್ರರಂಗವು ಜಾಗತಿಕವಾಗಿ ಭಾರತೀಯ ಸಿನಿಮಾವನ್ನು ಹೊಸ ಹೊಸ ರೀತಿಗಳಲ್ಲಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಇದನ್ನು ನೋಡುವುದೇ ಒಂದು ಅದ್ಭುತ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಸರು ಹೇಳಲಿಚ್ಚಿಸದ ಸಿನಿಮಾ ಪತ್ರಕರ್ತರೊಬ್ಬರು ಈ ಕುರಿತು ಮಾತನಾಡಿದ್ದು, "ಬಾಲಿವುಡ್ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಅವರು ಹೀರೋ ಆಗಿದ್ದು ಪಲ್ಲವಿ ಅನುಪಲ್ಲವಿ ಚಿತ್ರದ ಮೂಲಕ. ಮಣಿರತ್ನಂ ಅವರ ನಿರ್ದೇಶನದ ಮೊದಲ ಸಿನಿಮಾ ಕೂಡಾ ಪಲ್ಲವಿ ಅನುಪಲ್ಲವಿ' ಎಂದು ತಿಳಿಸಿದ್ದಾರೆ.
ಅನಿಲ್ ಕಪೂರ್ ಈ ಚಿತ್ರದಲ್ಲಿ ಬರುವ ಓ ಪ್ರೇಮಿ..ಓ ಪ್ರೇಮಿ.. ಹಾಡಿನ ವಿಡಿಯೋ ಶೇರ್ ಮಾಡಿದ್ದಾರೆ. 43 ವರ್ಷಗಳ ಹಿಂದೆ ತಾವು ಕನ್ನಡದಲ್ಲಿ ನಟಿಸಿದ್ದನ್ನು ಹೇಳಿಕೊಂಡಿದ್ದಾರೆ. ಜೊತೆಗೆ, ಈಗಿನ ನಾಯಕರು ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಬೆಳೆಸುತ್ತಿರುವ ಬಗ್ಗೆಯೂ ಬರೆದಿದ್ದಾರೆ.
ಪಲ್ಲವಿ, ಅನುಪಲ್ಲವಿ ಚಿತ್ರ ಆಗಿನ ಕಾಲಕ್ಕೆ ಸಾಧಾರಣ ಯಶಸ್ಸು ಕಂಡಿದ್ದ ಸಿನಿಮಾ. ನಿರ್ಮಾಪಕರಿಗೆ ಒಂದಿಷ್ಟು ಲಾಭವನ್ನೂ ಮಾಡಿಕೊಟ್ಟಿತ್ತು. ನಂತರ ತಮಿಳಿಗೆ ಡಬ್ ಆಗಿ, ಅಲ್ಲಿಯೂ ಯಶಸ್ಸು ಕಂಡಿತ್ತು. ನಿರ್ದೇಶಕ ಮಣಿರತ್ನಂ, ಛಾಯಾಗ್ರಹಣಕ್ಕೆ ಬಾಲು ಮಹೇಂದ್ರ, ಸಂಭಾಷಣೆಗೆ ಆರ್.ಎನ್.ಜಯಗೋಪಾಲ್ ಅವರಿಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು.
ಅನಿಲ್ ಕಪೂರ್ ಈ ಮಾತು ಹೇಳುವುದಕ್ಕೆ ಕಾರಣ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಮೊದಲಾದವರ ಒಡನಾಟ. ಈ ಅದ್ಭುತ ಚಿತ್ರರಂಗದವರ ಜೊತೆಗಿನ ನನ್ನ ಒಡನಾಟವು ಇಲ್ಲಿಗೇ ಕೊನೆಯಾಗದಿರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ರಿಷಬ್ ಶೆಟ್ಟಿ ಅವರು ಇದೀಗ ಅನಿಲ್ ಕಪೂರ್ ಅವರ ಪ್ರೀತಿಯ ಮಾತುಗಳಿಗೆ ಧನ್ಯವಾದ ಎಂದಿದ್ದಾರೆ.
ಇನ್ನಷ್ಟು ಓದಿರಿ:
ನಟ ಪ್ರಭಾಸ್ ಅಭಿನಯದ ಚಿತ್ರ 'ರಾಜಾಸಾಬ್' ಜ.9ಕ್ಕೆ ಬಿಡುಗಡೆ