ಕೇಂದ್ರ ಸರ್ಕಾರ, ಆರ್ಎಸ್ಎಸ್ ಮಾರ್ಗದರ್ಶನದಂತೆ ನಡೆಯುತ್ತಿದೆ. ಮನುಸ್ಮೃತಿಯು ಮಹಿಳೆಯರು, ದಲಿತರ ಬಳಿ ಹಣ ಇರಬಾರದು ಎಂದು ಹೇಳುತ್ತದೆ. ಅದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ಮನರೇಗಾ ಯೋಜನೆ ರದ್ದು ಮಾಡಿದೆ. ಈ ಹಿಂದೆ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ತಂದಾಗಲೂ ಬಿಜೆಪಿ ವಿರೋಧಿಸಿತ್ತು. ಈಗ ಉದ್ಯೋಗ ಹಕ್ಕಿಗಾಗಿ ಜಾರಿ ಮಾಡಲಾದ ಯೋಜನೆಯನ್ನೇ ರದ್ದು ಮಾಡಿದೆ. ಈ ಮೂಲಕ ಗ್ರಾಮಗಳ ಅಧಿಕಾರ ಕಿತ್ತುಕೊಂಡಿದೆ.
ಮ-ನರೇಗಾ ಯೋಜನೆ ರದ್ದು ಮಾಡಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿರುವುದರ ವಿರುದ್ಧ ಗ್ರಾಮ ಮಟ್ಟದಿಂದ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರಗೆ ಹೋರಾಟ ಮಾಡಲಾಗುವುದು. ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆಸಿದಂತೆ, ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ಮನರೇಗಾ ಮರುಸ್ಥಾಪನೆಯಾಗುವವರೆಗೆ ಹೋರಾಟ ನಡೆಸಲಾಗುವುದು.
ಇತ್ತೀಚೆಗೆ ನರೇಗಾ ಯೋಜನೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಮಹಾತ್ಮಾ ಗಾಂಧಿ ಹೆಸರನ್ನೂ ತೆಗೆದು ಹಾಕಿತ್ತು ಹಾಗೂ ಕೂಲಿ ಅವಧಿಯನ್ನು 100ರಿಂದ 125 ದಿನಕ್ಕೆ ಹೆಚ್ಚಿಸಿತ್ತು. ಈ ಮುಂಚೆ ಕೂಲಿಯನ್ನು ಬಹುಪಾಲು ತಾನೇ ಕೊಡುತ್ತಿದ್ದ ಕೇಂದ್ರ, ಇನ್ನು ರಾಜ್ಯಗಳು ಶೇ.40 ಹಣ ನೀಡಬೇಕು ಎಂದು ನಿಯಮ ರೂಪಿಸಿತ್ತು. ಇದಕ್ಕೆ ಕಾಂಗ್ರೆಸ್ ವಿರೋಧವಿದೆ.
ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಂ ರಮೇಶ್, ‘ ಜಿ ರಾಮ್ ಜಿ ಕಾಯ್ದೆಯ ಮೂಲಕ ಕೇಂದ್ರ ಸರ್ಕಾರವು ವಿಕೇಂದ್ರೀಕರಣದ ಬದಲು ಕೇಂದ್ರೀಕರಣ ಮಾಡಲು ಹೊರಟಿದೆ. ಹೊಸ ಕಾಯ್ದೆಯಡಿಯಲ್ಲಿ ಉದ್ಯೋಗವು ಇನ್ನು ಮುಂದೆ ಹಕ್ಕಾಗಿ ಉಳಿಯುವುದಿಲ್ಲ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ’ ಎಂದು ಹೇಳಿದರು.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಬದಲಿಗೆ ವಿಬಿ ಜಿ- ರಾಮ್- ಜಿ ಕಾಯ್ದೆ ಜಾರಿ ಮಾಡಿರುವ ವಿರುದ್ಧ ಕಾಂಗ್ರೆಸ್ ಪಕ್ಷವು ಜ.10 ರಿಂದ ಫೆ.25ರ ತನಕ ರಾಷ್ಟ್ರವ್ಯಾಪಿ ‘ಮನರೇಗಾ ಬಚಾವೋ ಸಂಗ್ರಾಮ’ ಅಭಿಯಾನ ನಡೆಸುವುದಾಗಿ ಘೋಷಿಸಿದೆ.
ಇನ್ನಷ್ಟು ಓದಿರಿ:
ನನ್ನ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ : ಜಾರಕಿಹೊಳಿ ಸಹೋದರರ ವಿರುದ್ಧ ಲಕ್ಷ್ಮಣ್ ಸವದಿ